ಶಿಕ್ಷಣದ ಗುಣಮಟ್ಟ ಹಾಗೂ ಲಭ್ಯತೆಯು ನಮ್ಮ ಕೆಲಸದ ಮಾರ್ಗದರ್ಶಿ ಸೂತ್ರವಾಗಿದೆ
ಧನಾತ್ಮಕ ಬದಲಾವಣೆಯ ಕಥನಗಳು ಆರಂಭವಾಗುವುದು ಒಂದು ಒಳ್ಳೆಯ ಶಾಲೆಯಲ್ಲಿ ಎಂಬ ನಂಬಿಕೆಯೊಂದಿಗೆ ನಾವು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮೊದಲ ಹೆಜ್ಜೆಗಳನ್ನು ಇರಿಸಿದೆವು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು 2001 ರಲ್ಲಿ ಸರ್ಕಾರಿ ಶಾಲೆಗಳಲ್ಲಿ ನಾವು ಕಾರ್ಯಕ್ರಮಾತ್ಮಕ ಮಧ್ಯಪ್ರವೇಶವನ್ನು ಪ್ರಾರಂಭಿಸಿದೆವು. ಕಲಿಕಾ ಖಾತ್ರಿ, ಮಗುಸ್ನೇಹಿ ಶಾಲಾ ಉಪಕ್ರಮ, ಹಾಗೂ ಕಲಿಕಾ ಬಲವರ್ಧನೆ ಮುಂತಾದ ನಮ್ಮ ಕಾರ್ಯಕ್ರಮಗಳು ಶಾಲೆಯನ್ನು ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಶಾಲೆಗಳನ್ನು ಸುರಕ್ಷಿತವಾದ ಹಾಗೂ ಒಳಗೊಳ್ಳುವಂತಹ ಸ್ಥಳಗಳನ್ನಾಗಿ ಮಾಡುವುದರ ಜೊತೆಗೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಇತರ ಹಲವು ಸವಾಲುಗಳಿಗೆ ಪರಿಹಾರ ಸೂಚಿಸಲು ಪ್ರಯತ್ನಿಸಿವೆ.

ಒಂದು ದಶಕದ ನಂತರ ನಮ್ಮ ಕಾರ್ಯವಿಧಾನವನ್ನು ಹೆಚ್ಚು ಸಾಂಸ್ಥಿಕ ಮಾದರಿಗೆ ಬದಲಾಯಿಸಿಕೊಂಡೆವು. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ನಮ್ಮ ಸಂಕಲ್ಪವು, ನಮ್ಮ ತಂಡಗಳು ತಳಸ್ತರದಲ್ಲಿ ಮಾಡುತ್ತಿರುವ ಆಳವಾದ ಮತ್ತು ವಿಸ್ತೃತ ಕೆಲಸದಲ್ಲಿ ಕಂಡು ಬರುತ್ತದೆ. ತರಗತಿಗಯಲ್ಲಿ ಆಗುವ ಬೋಧನೆ ಹಾಗೂ ಕಲಿಕೆಯ ಮೇಲೆ ನೇರವಾದ ಪ್ರಭಾವ ಬೀರುವ ವ್ಯಕ್ತಿಗಳಾದ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಶೈಕ್ಷಣಿಕ ಅಧಿಕಾರಿಗಳ ಜೊತೆ ನಮ್ಮ ತಂಡದವರು ನಿಕಟವಾಗಿ ಹಾಗೂ ನಿರಂತರವಾಗಿ ಕೆಲಸ ಮಾಡುತ್ತಾರೆ.
ಶಿಕ್ಷಣ ಕ್ಷೇತ್ರದಲ್ಲಿನ ನಮ್ಮ ಕೆಲಸದ ವ್ಯಾಪ್ತಿಯು 7 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಹರಡಿದೆ.
ಸಂಶೋಧನೆಯು ನಮ್ಮ ಕ್ಷೇತ್ರಕಾರ್ಯದ ಒಂದು ಮುಖ್ಯವಾದ ಭಾಗ. ನಾವು ಕೆಲಸ ಮಾಡುತ್ತಿರುವ ಜಿಲ್ಲೆಗಳಿಂದ ಸಂಗ್ರಹಿಸುವ ಪ್ರಾಥಮಿಕ ದತ್ತಾಂಶಗಳನ್ನು ಬಳಸಿಕೊಂಡು, ನಮ್ಮ ತಂಡಗಳು ಶಾಲಾ ಶಿಕ್ಷಣದ ಮುಖ್ಯ ವಿಷಯಗಳ ಕುರಿತು ಕ್ಷೇತ್ರ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುತ್ತವೆ. ನಾವು ನಮ್ಮ ಒಳನೋಟಗಳು ಹಾಗೂ ಅಧ್ಯಯನಗಳನ್ನು ನೀತಿಗಳನ್ನು ಪ್ರಭಾವಿಸಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಶಿಕ್ಷಣವೇತ್ತರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ.
ಕೋವಿಡ್-19ರ ಸಂದರ್ಭದಲ್ಲಿ, ನಾವು ದೊಡ್ಡಮಟ್ಟದಲ್ಲಿ ಪರಿಹಾರ ಹಾಗೂ ಲಸಿಕೆ ಹಾಕುವ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅನಂತರ, 2022ರಲ್ಲಿ, ಫೌಂಡೇಷನ್ನ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕ್ರಮವನ್ನು ಬೆಂಗಳೂರಿನ ಮೂರು ಕೊಳಗೇರಿ ಪ್ರದೇಶಗಳಲ್ಲಿ ಪ್ರಾರಂಭಿಸಲಾಯಿತು. 2023ರಲ್ಲಿ, ಈ ಉಪಕ್ರಮವನ್ನು ಜಾರ್ಖಂಡ್ ಹಾಗೂ ಛತ್ತೀಸ್ಗಢ್ ರಾಜ್ಯಗಳ ಗಡಿ ಪ್ರದೇಶದಲ್ಲಿರುವ 10 ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಅದೇ ವರ್ಷದಲ್ಲಿ ಭೋಪಾಲ್ನಲ್ಲಿ ಇರುವ ನಮ್ಮ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದು ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಸಹ ಆರಂಭಿಸಿದೆವು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಲು ನೆರವಾಗಲು ಆರೋಗ್ಯ ಕ್ಷೇತ್ರದಲ್ಲಿ ಅವಶ್ಯವಿರುವ ಪರಿಣತಿಯನ್ನು, ತಳಸ್ತರದಲ್ಲಿ ವ್ಯಾಪಕವಾಗಿ ಮತ್ತು ವಿಸ್ತಾರವಾಗಿ ಕೆಲಸ ಮಾಡುವ ಮೂಲಕ ನಾವು ಈಗ ಬೆಳೆಸಿಕೊಳ್ಳುತ್ತಿದ್ದೇವೆ.
ನಮ್ಮ ಕೆಲಸದ ಮೂರನೇ ಮುಖ್ಯ ಕ್ಷೇತ್ರವು ಜೀವನೋಪಾಯ ನಿರ್ವಹಣೆಗೆ ಸಂಬಂಧಿಸಿದ್ದು.
ಹೆಚ್ಚಿನ ಮತ್ತು ಸುಸ್ಥಿರವಾದ ಆದಾಯವು ಪ್ರತಿಯೊಂದು ಕುಟುಂಬದ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಇದನ್ನು ಸಾಧಿಸಲಿಕ್ಕಾಗಿ ಜನತೆ ಮತ್ತು ಸಮುದಾಯಗಳಿಗೆ ಬೆಂಬಲ ನೀಡಲು ಪ್ರಯತ್ನಿಸುತ್ತೇವೆ. ಸಾಂಪ್ರದಾಯಿಕ ಜೀವನೋಪಾಯ ಮಾರ್ಗಗಳಿಗೆ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು, ಮನರೇಗಾ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತಹ ಸರ್ಕಾರಿ ಕಾನೂನುಗಳ ಅಡಿಯಲ್ಲಿ ಬರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮುಂತಾದ ಆದಾಯ ಸೃಷ್ಟಿಸುವ ಮುಖ್ಯ ಅಂಶಗಳ ಮೇಲೆ ನಮ್ಮ ತಂಡಗಳು ಗಮನ ಹರಿಸುತ್ತವೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಂತೆ, ಜೀವನೋಪಾಯ ನಿರ್ವಹಣೆಯ ಕ್ಷೇತ್ರದ ನಮ್ಮ ಕೆಲಸವೂ ಕೂಡ, ಭಾರತದ ಅತ್ಯಂತ ದುರ್ಬಲ ಮತ್ತು ಅಂಚಿಗೆ ತಳ್ಳಲ್ಪಟ್ಟ ಜನರಿಗೆ ಒತ್ತಾಸೆ ನೀಡುವ ಉದ್ದೇಶವನ್ನು ಹೊಂದಿದೆ. ಜೀವನೋಪಾಯ ನಿರ್ವಹಣೆ ಕ್ಷೇತ್ರದ ಕೆಲಸವನ್ನು ನಾವು ದೇಶದ ಮಧ್ಯಭಾಗದಲ್ಲಿರುವ ಆದಿವಾಸಿ ವಲಯವಾದ ಛತ್ತೀಸ್ಗಢ ರಾಜ್ಯದ ರಾಯ್ಘರ್ ಜಿಲ್ಲೆ ಮತ್ತು ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯಲ್ಲಿ ಪ್ರಾರಂಭಿಸಿದೆವು.