ಧ್ಯೇಯ ಹಾಗೂ ಮಾರ್ಗ
ನಾವು ನ್ಯಾಯಯುತ, ಸಮಾನ, ಮಾನವೀಯ ಹಾಗೂ ಸುಸ್ಥಿರ ಸಮಾಜವೊಂದರ ನಿರ್ಮಾಣದತ್ತ ಕೆಲಸ ಮಾಡುತ್ತಿರುವ ಒಂದು ಲಾಭೋದ್ದೇಶರಹಿತ ಸಂಸ್ಥೆ. ನಮ್ಮ ಕಾರ್ಯವು ಭಾರತದಾದ್ಯಂತ ವ್ಯಾಪಿಸಿದೆ.
ನಮ್ಮ ಧ್ಯೇಯವು, ನಮ್ಮ ಜನರ ಬದುಕಿನಲ್ಲಿ ಬದಲಾವಣೆಯನ್ನು ತರಲು ಇಚ್ಛಿಸುವ ಮತ್ತು ಸಂವಿಧಾನದಲ್ಲಿ ನಮಗೆ ನಾವೇ ವಾಗ್ದಾನ ಮಾಡಿಕೊಂಡಿರುವಂತಹ ಸಮಾಜವೊಂದನ್ನು ಅಭಿವೃದ್ಧಿಪಡಿಸುವುದಕ್ಕಾಗಿ ತಮ್ಮ ಕೊಡುಗೆಯನ್ನು ನೀಡುವುದಕ್ಕಾಗಿ ವಿವಿಧ ಉಪಕ್ರಮಗಳ ಮೂಲಕ ಕೆಲಸ ಮಾಡುವುದಕ್ಕಾಗಿ ನಮಗೆ ಮಾರ್ಗದರ್ಶನವನ್ನು ನೀಡುತ್ತದೆ.

ಚಿತ್ರ ಕ್ರೆಡಿಟ್ - ದಿಲೀಪ್ ಪ್ರಕಾಶ್
ನಮ್ಮ ಕೆಲಸವು ಎರಡು ಆಯಾಮಗಳನ್ನು ಆಧರಿಸಿದೆ:
ಮೊದಲ ಆಯಾಮವು ʻಅಗತ್ಯತೆʼಯಾಗಿದ್ದು, ಇದು, ಜನರು ತಮ್ಮ ಮೂಲಭೂತ ಅಗತ್ಯತೆಗಳಾದ ಆರೋಗ್ಯ, ಆಹಾರ, ಶಿಕ್ಷಣ, ವಸತಿ, ಜೀವನೋಪಾಯ, ಗೌರವ ಮತ್ತು ಸುರಕ್ಷತೆ ಮುಂತಾದವುಗಳನ್ನು ಪಡೆಯಲು ನೆರವಾಗುವ ಉದ್ದೇಶವನ್ನು ಹೊಂದಿದೆ.
ಎರಡನೇ ಆಯಾಮವು ʻಮೌಲ್ಯʼವಾಗಿದ್ದು, ಜನರು ಅನ್ಯಾಯ, ತಾರತಮ್ಯ ಅಥವಾ ಶೋಷಣೆಗೆ ಒಳಗಾಗದೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು, ಹಾಗೂ ಮಾನವೀಯತೆ ಮತ್ತು ಸಹಾನುಭೂತಿಯಿಂದ ಕಾರ್ಯ ನಿರ್ವಹಿಸುವಂತೆ ಮಾಡುವ ನಮ್ಮ ಕಾರ್ಯವನ್ನು ಇದು ಪ್ರೇರೇಪಿಸುತ್ತದೆ.
ನಮ್ಮ ಕೆಲಸವನ್ನು ಈ ಎರಡು ಆಯಾಮಗಳ ದೃಷ್ಟಿಕೋನದಿಂದ ನೋಡಬಹುದು. ಅಗತ್ಯತೆಗಳು ಈಡೇರಿದಾಗ, ಅದು ಅಂಚಿಗೆ ತಳ್ಳಲ್ಪಟ್ಟವರನ್ನು ಸಬಲೀಕರಿಸಿ ಅವರಿಗೆ ಧ್ವನಿಯನ್ನು ನೀಡುತ್ತದೆ, ಮತ್ತು ಮೌಲ್ಯಯುತವಾಗಿ ನಡೆದುಕೊಂಡಾಗ, ಅದು ಎಲ್ಲರಿಗೂ ಹೆಚ್ಚಿನ ಗೌರವಯುತವಾದ ಜೀವನವನ್ನು ನೀಡುತ್ತದೆ.
ನಾವು ನಮ್ಮದೇ ಕಾರ್ಯನಿರ್ವಹಣೆಯ ಮೂಲಕ ಸಂಸ್ಥೆಗಳನ್ನು ಕಟ್ಟುತ್ತೇವೆ, ಸರ್ಕಾರದೊಂದಿಗಿನ ಸಹಯೋಗದಲ್ಲಿ ನಮ್ಮ ಧ್ಯೇಯಕ್ಕೆ ಮೂಲಭೂತವಾದ ಯೋಜನೆಗಳ ಮೇಲೆ ಕೆಲಸ ಮಾಡುತ್ತೇವೆ, ಹಾಗೂ ತಲುಪಲು ಕಷ್ಟಕರವಾದ ಪ್ರದೇಶಗಳು ಮತ್ತು ಐತಿಹಾಸಿಕವಾಗಿ ನಿರ್ಲಕ್ಷಿತವಾದ ಪ್ರದೇಶಗಳೂ ಸೇರಿದಂತೆ, ದೇಶದಾದ್ಯಂತ ಪಾಲುದಾರ ಸಂಸ್ಥೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತೇವೆ.
ನಾವು ಕ್ಷೇತ್ರಸಂಸ್ಥೆಗಳು, ಅನುದಾನಗಳು ಘಟಕ ಹಾಗೂ ವಿಶ್ವವಿದ್ಯಾಲಯದೊಂದಿಗೆ, ಸಮನ್ವಯದಿಂದ, ಪರಸ್ಪರ ಪೂರಕವಾಗಿರುವಂತೆ ಕೆಲಸ ಮಾಡುತ್ತೇವೆ. ಶಿಕ್ಷಣ ಕ್ಷೇತ್ರದಲ್ಲಿ ತಳಸ್ತರದಲ್ಲಿ ನಾವು ಆಳವಾಗಿ ಮಾಡಿರುವ ಕೆಲಸವು, ನಮ್ಮ ಕಾರ್ಯಕ್ಷೇತ್ರವನ್ನು ಆರೋಗ್ಯ ಮತ್ತು ಜೀವನೋಪಾಯ ನಿರ್ವಹಣೆಗೆ ಸಂಬಂಧಿಸಿದ ಕ್ಷೇತ್ರಗಳಿಗೆ ವಿಸ್ತರಿಸಲು ಅಡಿಪಾಯವನ್ನು ಹಾಕಿದೆ.
ಬದಲಾವಣೆ ನಮ್ಮ ಕಾರ್ಯಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದರೂ, ವಿನಯಶೀಲತೆ, ವಿಶ್ವಾಸ, ಹಾಗೂ ನಾವು ಯಾರಿಗಾಗಿ ಮತ್ತು ಯಾರೊಂದಿಗೆ ಕೆಲಸ ಮಾಡುತ್ತೇವೋ ಅವರನ್ನು ಗೌರವಿಸುವುದು ನಮಗೆ ಬಹಳ ಮುಖ್ಯವಾದದ್ದು. ಅತ್ಯಂತ ದುರ್ಬಲ ವರ್ಗದವರ ನಿರ್ದಿಷ್ಟ ಅಗತ್ಯತೆಗಳನ್ನು ಈಡೇರಿಸುವುದಕ್ಕೆ ಅದರದ್ದೇ ಆದ ಮಹತ್ವವಿದೆ. ಸಣ್ಣ ಗುಂಪಿನಲ್ಲಿರುವ ಜನರೇ ಆಗಿರಲಿ, ಅವರಿಗೆ ಸ್ಪಂದಿಸಿ ಅವರಲ್ಲಿ ಬದಲಾವಣೆಯನ್ನು ತರುವುದು ನಿಜಕ್ಕೂ ಯೋಗ್ಯ ಕಾರ್ಯವಾಗಿದೆ.
ನೈಜ ಮತ್ತು ಸುಸ್ಥಿರ ಬದಲಾವಣೆಯನ್ನು ತರಬೇಕಾದರೆ ತಳಸ್ತರದಲ್ಲಿ ತೀವ್ರ, ಆಳವಾದ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ.
ತಳಸ್ತರದಲ್ಲಿ ಕೆಲಸ ಮಾಡುತ್ತಿರುವ ಪ್ರಬಲ ಸಂಸ್ಥೆಗಳು ಅರ್ಥಪೂರ್ಣ ಬದಲಾವಣೆ ಮತ್ತು ಸುಧಾರಣೆಗಳನ್ನು ತರಬಲ್ಲವು. ಶಿಕ್ಷಣ, ಆರೋಗ್ಯ, ಆಹಾರ ಮತ್ತು ಸಾಮಾಜಿಕ ಭದ್ರತೆ ಹಾಗೂ ಮೂಲಸೌಕರ್ಯ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಉನ್ನತ ಗುಣಮಟ್ಟದ ಸಾರ್ವಜನಿಕ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ನಾವು ಗುರುತಿಸುತ್ತೇವೆ. ಪ್ರಜಾತಾಂತ್ರಿಕ ಸಮಾಜದಲ್ಲಿ ಸ್ಪಂದನಶೀಲ ನಾಗರಿಕ ಸಮಾಜ ಸಂಸ್ಥೆಗಳು ವಹಿಸುವ ಪಾತ್ರವನ್ನು ನಾವು ಗೌರವಿಸುತ್ತೇವೆ ಮತ್ತು ಗುರುತಿಸುತ್ತೇವೆ.
ನಮ್ಮ ಕೆಲಸದ ವ್ಯಾಪ್ತಿಯು, ನಾವೇ ಮಾಡುವ ಮತ್ತು ನಮ್ಮ ಸಹವರ್ತಿಗಳೊಂದಿಗೆ ತಳಸ್ತರದಲ್ಲಿ ಆಳವಾಗಿ ಮಾಡುವ ಕೆಲಸಗಳಿಂದ ಹಿಡಿದು, ವಿಶ್ವವಿದ್ಯಾಲಯಗಳೂ ಸೇರಿದಂತೆ ಸಾಮಾಜಿಕ ಉದ್ದೇಶಗಳನ್ನು ಹೊಂದಿರುವ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವದರವರೆಗೆ ವಿಸ್ತರಿಸಿದೆ. ನೀತಿಗಳನ್ನು ರೂಪಿಸಿ ಜಾರಿಗೊಳಿಸುವುದಕ್ಕಾಗಿ ಮತ್ತು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಸುಧಾರಣೆ ತರುವುದಕ್ಕಾಗಿ ಸಹಕರಿಸಲು ಮತ್ತು ನೆರವು ಒದಗಿಸಲು ನಾವು ಸರ್ಕಾರಗಳಿಗೆ ಸಹಕಾರವನ್ನು ನೀಡುತ್ತೇವೆ.
ನಮ್ಮ ಕಾರ್ಯವಿಧಾನದ ಹಿಂದಿನ ಚಾಲಕಶಕ್ತಿಯಾಗಿರುವ ನಮ್ಮ ಕಲಿಕೆಗಳು
- ತಳಸ್ತರಕ್ಕೆ ಆದಷ್ಟು ಹತ್ತಿರದಲ್ಲಿರುವ ಪರಿಣತಿಯು ನಮ್ಮ ಕೆಲಸಕ್ಕೆ ಪ್ರಮುಖವೆನಿಸುತ್ತದೆ. ನಮಗೆ ವಿವಿಧ ಪ್ರಮಾಣದಲ್ಲಿ ತಾಂತ್ರಿಕ, ಸಾಮಾಜಿಕ – ಮಾನವ ಮತ್ತು ಕಾರ್ಯನಿರ್ವಹಣಾ ಪರಿಣತಿಯ ಅಗತ್ಯವಿದೆ. ತೀವ್ರಾಸಕ್ತಿ ಮತ್ತು ಬದ್ಧತೆಯು, ಪರಿಣತಿಯು ಕೊಡುಗೆ ನೀಡುವುದಕ್ಕಾಗಿ ಶಕ್ತಿಯನ್ನು ಒದಗಿಸುತ್ತದೆ.
- ಸರಳ ಮತ್ತು ನೇರ ವಿಧಾನಗಳು, ನಿರಂತರವಾಗಿ ಬದಲಾಗುತ್ತಿರುವ ಸಂದರ್ಭಗಳಲ್ಲಿ ಬದಲಾವಣೆಯನ್ನು ತರುವ ಅತಿ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿವೆ.
- ಕೆಲಸದ ತೀವ್ರತೆ ಮತ್ತು ಗುಣಮಟ್ಟವು ವ್ಯಕ್ತಿಗಳು, ಸಮುದಾಯಗಳು ಮತ್ತು ಸಮಾಜಕ್ಕೆ ಉಪಯುಕ್ತ ಮತ್ತು ಮೌಲ್ಯಯುತ ಎನಿಸುವ ಪರಿಣಾಮಗಳಿಗೆ ಕಾರಣವೆನಿಸಬೇಕು.
- ಅರ್ಥಪೂರ್ಣತೆ ಮತ್ತು ಮೌಲ್ಯಗಳು ನಮ್ಮ ಕೆಲಸದ ಮೂಲಾಧಾರ ಎನಿಸಿವೆ. ಸಾಧನಗಳು ಗುರಿಯಷ್ಟೇ ಪ್ರಮುಖ ಎನಿಸುತ್ತವೆ.
- ನಾವೇನು ಮಾಡಬಹುದು ಮತ್ತು ನಮ್ಮ ಕೆಲಸವು ಯಾವುದಕ್ಕೆಲ್ಲಾ ಕೊಡುಗೆಯನ್ನು ನೀಡಬಲ್ಲದು ಎಂಬುದಕ್ಕೆ ಮಿತಿಗಳಿವೆ. ಆದರೆ ಗರಿಷ್ಠ ಮಟ್ಟದಲ್ಲಿ ಕೊಡುಗೆ ನೀಡಲು ಯತ್ನಿಸುವ ನಮ್ಮ ಪ್ರಯತ್ನಗಳಿಗೆ ಇದು ಮಿತಿಯನ್ನು ಹೇರಬಾರದು.
- ವ್ಯಕ್ತಿಗಳ ಬದುಕು ಮತ್ತು ಸಮಾಜಗಳ ಪಾಲಿಗೆ ಯಾವುದು ಅತ್ಯಂತ ಪ್ರಮುಖವಾದುದು ಎಂಬುದನ್ನು ಕೆಲವೊಮ್ಮೆ ಅಳೆಯಲು ಆಗುವುದಿಲ್ಲ. ಗೌರವ, ಅನುಭೂತಿ, ಆರೈಕೆ, ಧೈರ್ಯ ಮತ್ತು ಚೇತರಿಕೆ ಇತ್ಯಾದಿಗಳನ್ನು ಸಿಂಧುತ್ವ ಅಥವಾ ನಿಷ್ಠೆಯ ಯಾವುದೇ ಮಾಪನದಿಂದ ಅಳೆಯಲು ಆಗುವುದಿಲ್ಲ. ಆದರೆ ಮಕ್ಕಳು ಮೂಲಭೂತ ಭಾಷೆ ಮತ್ತು ಗಣಿತವನ್ನು ಕಲಿಯುವುದು ಇತ್ಯಾದಿಗಳನ್ನು ಅಳೆಯಬಹುದು. ಅದೇ ಮಕ್ಕಳು ತಮ್ಮ ಬದುಕಿನಲ್ಲಿ ಹೇಗೆ ಪರಸ್ಪರ ಕಾಳಜಿ ವಹಿಸಲು ಅಥವಾ ನಿಜಕ್ಕೂ ಒಳಗೊಳ್ಳುವುದನ್ನು ಕಲಿಯುತ್ತಿದ್ದಾರೆ ಎಂಬುದನ್ನು ಅಳೆಯುವುದು ನಿಜಕ್ಕೂ ಕಷ್ಟದ ಕೆಲಸ.