ನಸ್ರೀನ್* ಕೇಂದ್ರವನ್ನು ಕಂಡುಕೊಂಡರೋ ಅಥವಾ ಕೇಂದ್ರವು ನಸ್ರೀನ್ ಅನ್ನು ಕಂಡುಕೊಂಡಿತೋ ಎಂದು ಹೇಳಲು ಕಷ್ಟ. 2020ರ ಆರಂಭದಲ್ಲಿ ಈಶಾನ್ಯ ದೆಹಲಿಯು ಕೋಮು ಗಲಭೆಯ ಹಿಡಿತದಲ್ಲಿತ್ತು. ಶಿವ ವಿಹಾರದ ನಿವಾಸಿಯಾದ ನಸ್ರೀನ್ ಅವರ ಸುತ್ತಲಿನ ಜಗತ್ತು ಕುಸಿದುಹೋಗಿತ್ತು. ಅವರು ಶಾಲೆಗೆ ಹೋಗಲಾಗದೇ ಭಾರೀ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದರು. ಅವರು ಆನ್ಲೈನ್ನಲ್ಲಿ ಸಿಕ್ಕ ದಾನಿಯೊಬ್ಬರ ಈಮೇಲ್ ವಿಳಾಸಕ್ಕೆ ಸಹಾಯ ಕೋರಿ ಹಲವು ಪತ್ರಗಳನ್ನು ಬರೆದರು. ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ, ಸ್ಥಳೀಯ ಲಾಭೋದ್ದೇಶ ರಹಿತ ಸಂಸ್ಥೆಯ ನಾಯಕರೊಬ್ಬರು ಹುಡುಗಿಯರ ಸಮುದಾಯ ಕೇಂದ್ರವನ್ನು ನಿರ್ವಹಿಸಬಲ್ಲ ವ್ಯಕ್ತಿಯನ್ನು ಹುಡುಕಿಕೊಂಡು ಶಿವ ವಿಹಾರಕ್ಕೆ ಬಂದರು. ಧೈರ್ಯವಾಗಿ ಇಂಗ್ಲಿಷ್ ಮಾತನಾಡುವ ಹುಡುಗಿಯೊಬ್ಬಳನ್ನು ಅಲ್ಲಿಯ ಜನರು ಸೂಚಿಸಿದರು. ಲಾಭೋದ್ದೇಶ ರಹಿತ ಸಂಸ್ಥೆಯು ನಸ್ರೀನ್ ಅವರನ್ನು ಹೀಗೆ ಹುಡುಕಿ, ಅವರಿಗೆ ಶಾಲೆಗೆ ಹೋಗದ, ಶಾಲೆಯಿಂದ ಹೊರಬಿದ್ದ ಅಥವಾ ಗಲಭೆಗಳ ಕಾರಣದಿಂದ ಹಿಂಸಾಚಾರ ಮತ್ತು ಇತರ ತೊಂದರೆಗಳನ್ನು ಅನುಭವಿಸಿದ ಯುವತಿಯರನ್ನು ಮತ್ತು ಯುವ ಮಹಿಳೆಯರನ್ನು ಸಂಘಟಿಸುವ ಕಾರ್ಯವನ್ನು ಅವರಿಗೆ ಒಪ್ಪಿಸಿತು.
ನಾಲ್ಕು ವರ್ಷಗಳಲ್ಲಿ ಸಂಘಟಕರಿಂದ ತರಬೇತುದಾರರಾಗಿ, ನಂತರ ಆಪ್ತ ಸಲಹೆಗಾರರು ಮತ್ತು ಕೇಂದ್ರದ ಮುಖ್ಯಸ್ಥೆ ಆಗಿ ಬೆಳೆದಿರುವ ನಸ್ರೀನ್ ಬಹಳ ದೂರ ಬಂದಿದ್ದಾರೆ. ಅವರು ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿದ್ದು, ಉನ್ನತ ಅಧ್ಯಯನಕ್ಕಾಗಿ ಅಮೆರಿಕೆಗೆ ಹೋಗುವ ಆಸೆ ಇಟ್ಟುಕೊಂಡಿದ್ದಾರೆ. ನಾನು ಅವರಿಗೆ ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯವನ್ನು ಪರಿಗಣಿಸಲು ಹೇಳಿದಾಗ, ತಮಗೆ “ಪ್ರೇಮ್ಜಿ ಸರ್” ಅವರನ್ನು ಭೇಟಿಯಾಗಲು ಆಸೆಯಿರುವುದರಿಂದ, ಅದರ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದು ಹೇಳಿದರು.
“ಅಪ್ನೆ ಹಕ್ ಕಾ ಖಾನಾ ಖಾ ರಹಿ ಹೈ ಲಡ್ಕಿಯಾನ್. ಅಪ್ನಿ ಎಜುಕೇಶನ್ ಕೆ ಲಿಯೆ ಲಡ್ ರಹಿ ಹೈನ್. ಪೈಸೆ ಬಚಾ ರಹಿ ಹೈನ್, ಅಪ್ನಿ ಬಾತೇನ್ ರಖ್ ರಹಿ ಹೈನ್ ಔರ್ ಹ್ಯಾರಸ್ಮೆಂಟ್ ಕೆ ಬಾರೆ ಮೆನ್ ಬಾತ್ ಕರ ರಹಿ ಹೈನ್.”
ನಾನು ಕೇಂದ್ರದ ಪರಿಣಾಮದ ಬಗ್ಗೆ ನಸ್ರೀನ್ ಅವರನ್ನು ಕೇಳಿದೆ. ಅವರು ಹೀಗೆ ಹೇಳಿದರು: “ಅಪ್ನೆ ಹಕ್ ಕಾ ಖಾನಾ ಖಾ ರಹಿ ಹೈ ಲಡ್ಕಿಯಾನ್. ಅಪ್ನಿ ಎಜುಕೇಶನ್ ಕೆ ಲಿಯೆ ಲಡ್ ರಹಿ ಹೈನ್. ಪೈಸೆ ಬಚಾ ರಹಿ ಹೈನ್, ಅಪ್ನಿ ಬಾತೇನ್ ರಖ್ ರಹಿ ಹೈನ್ ಔರ್ ಹ್ಯಾರಸ್ಮೆಂಟ್ ಕೆ ಬಾರೆ ಮೆನ್ ಬಾತ್ ಕರ ರಹಿ ಹೈನ್ (ಅವಳು ತನ್ನ ಹಕ್ಕುಗಳಿಗಾಗಿ ಹೋರಾಡುತ್ತಾಳೆ. ಅವಳು ತನ್ನ ಶಿಕ್ಷಣಕ್ಕಾಗಿ ಹೋರಾಡುತ್ತಾಳೆ. ಅವಳು ಪ್ರತಿಯೊಂದು ಪೈಸೆಯನ್ನೂ ಉಳಿಸುತ್ತಾಳೆ, ತನ್ನ ಅಭಿಪ್ರಾಯಗಳನ್ನು ಮುಂದಿಡುತ್ತಾಳೆ ಮತ್ತು ಹಿಂಸೆ ವಿರುದ್ಧ ಮಾತನಾಡುತ್ತಾಳೆ).”
ಲಖ್ನೋನ ತಮ್ಮ ಕಛೇರಿಯಲ್ಲಿ ರುಬಿನಾ* ಮತ್ತು ಇಶಾನಿ* (ಇತ್ತೀಚೆಗೆ ಪ್ರಾರಂಭವಾದ ಲಾಭೋದ್ದೇಶ ರಹಿತ ಸಂಸ್ಥೆಯೊಂದರ ಸಂಸ್ಥಾಪಕರು) ಅವರು ಹೇಳಿದ್ದೂ ಸರಿಸುಮಾರು ಇದನ್ನೇ. ಅವರು “ಹುಡುಗಿಯರು ಕಣ್ಣಿಗೆ ಕಾಣಿಸಬೇಕು. ಇದು ಹೆಚ್ಚು ಸ್ಥಳೀಯ (ಯುವತಿಯರು) ರೋಲ್ ಮಾಡೆಲ್ಗಳಿಂದ ಸಾಧ್ಯವಾಗುತ್ತದೆ. ಹೆಚ್ಚು ಯುವತಿಯರು ಸಮುದಾಯಗಳಲ್ಲಿ ವಾಸಿ ಮಾಡಿ, ಜ್ಞಾನದ ಮಟ್ಟದಲ್ಲಿನ ಅಂತರವನ್ನು ಕಡಿಮೆ ಮಾಡಿ ಬದಲಾವಣೆಯ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ಹೇಳಿದರು. ರುಬಿನಾ ಮತ್ತು ಇಶಾನಿ ಮೊದಲು ಭೇಟಿಯಾದದ್ದು ಹಲವು ವರ್ಷಗಳ ಹಿಂದೆ ನಡೆದ ಫೆಲೋಶಿಪ್ ಕಾರ್ಯಕ್ರಮವೊಂದರಲ್ಲಿ. ಅವರು ಹಲವು ರಾಜ್ಯಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಜೀವನೋಪಾಯದ ಮೇಲೆ ಕೆಲಸ ಮಾಡಿ, ವರ್ಷಗಳ ನಂತರ ಮತ್ತೆ ಭೇಟಿಯಾಗಿ ಅವರದೇ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಲಖ್ನೋ ಮತ್ತು ಸುತ್ತಮುತ್ತಲಿನ ಸಮುದಾಯಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವ ಮಹಿಳಾ ರೋಲ್ ಮಾಡೆಲ್ಗಳನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೋಮು ಗಲಭೆಗಳಿಂದ ಧ್ರುವೀಕೃತಗೊಂಡಿರುವ ಸಮುದಾಯಗಳಲ್ಲಿ ಆಳವಾಗಿ ಕೆಲಸ ಮಾಡುವುದು ಸುಲಭದ ಮಾತೇನಲ್ಲ. ಆದಾಗ್ಯೂ, ಅವರು ತಮ್ಮ ವೈಯಕ್ತಿಕ, ರಾಜಕೀಯ ಮತ್ತು ವೃತ್ತಿಪರ ಜೀವನವನ್ನು ಎಚ್ಚರಿಕೆಯಿಂದ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಒಂದು ಲಾಭೋದ್ದೇಶ ರಹಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸ್ತ್ರೀಯರು
ಮೀನಾಕ್ಷಿ ಅವರಿಗೆ, ಈ ಸಮತೋಲನವನ್ನು ಸಾಧಿಸುವುದು ಅಷ್ಟು ಕಷ್ಟವಾಗಿಲ್ಲ. 2002 ರಲ್ಲಿ ಗುಜರಾತ್ ಗಲಭೆಗಳ ನಂತರ, ಅವರು ಅಹಮದಾಬಾದ್ನ ಜುಹಾಪುರಾದಲ್ಲಿ ಮುಸ್ಲಿಂ ಮಹಿಳೆಯರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ನಾನು ಆಕೆಯನ್ನು ಭೇಟಿಯಾದ ಎರಡೂ ಸಂದರ್ಭಗಳಲ್ಲಿ, ಅವರು ಕೆಲಸ ಮಾಡುವ ಲಭೋದ್ದೇಶ ರಹಿತ ಸಂಸ್ಥೆಯ ಕಚೇರಿಯಲ್ಲಿ ಇದ್ದ ಏಕೈಕ ಹಿಂದೂ ಮಹಿಳೆ ಅಂದರೆ ಮೀನಾಕ್ಷಿ. ಅವರು ಅಲ್ಲಿ 22 ವರ್ಷಗಳಿಂದ ಕೆಲಸ ಮಾಡುತ್ತದ್ದಾರೆ, ಬಹಪಾಲು ಸಂಬಳವಿಲ್ಲದೆ. ಆಪ್ತ ಸಲಹೆಗಾರರಾಗಿರುವ ಅವರಿಗೆ ಬಿಡುವೇ ಇರುವುದಿಲ್ಲ. ಅವರು ಪ್ರತಿದಿನ ಮಹಿಳೆಯರು ಮತ್ತು ಹುಡುಗಿಯರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಕೇಳಿ, ಹಲವು ವಿಚಾರಗಳ ಕುರಿತು ಸಲಹೆಗಳನ್ನು ನೀಡುತ್ತಾರೆ. ಸಂಜೆ ಮನೆಗೆ ತಲುಪಿದಾಗ, ಅವರಿಗೆ ಕರೆಗಳು ಬರುವುದರಿಂದ ಅವರು ತಪ್ಪದೇ ತಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ. ಕಳೆದ ವರ್ಷಗಳಲ್ಲಿ ಅವಧಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಾನು ಅವರನ್ನು ಕೇಳಿದೆ.
“ವೈಲೆನ್ಸ್ ಪಹಚಾನ್ ರಹಿ ಹೈನ್ ಔರತೇನ್. ಹರ್ ಔರತ್ ಮೇನ್ ಸಮಜ್ಹದಾರಿ ಹೈ ಕಿ ಉಸ್ಕೆ ಸಾಥ್ ಕ್ಯಾ ಹೋ ರಹಾ ಹೈನ್. ಉನ್ಹೇ ಖುಲ್ ಕೆ ಬಾತ್ ಕರ್ನೆ ಕಿ ಹಿಮ್ಮತ್ ನಹೀ ಮಿಲ್ತಿ. ಯಹಾಂ ಆತಿ ಹೈನ್ ತೋ ಖುಲ್ ಕೆ ಬಾತ್ ಕರ್ತೀ ಹೈನ್ ಔರ್ ಏಕ್ ದೂಸ್ರೆ ಕೋ ಹಿಮ್ಮತ್ ದೇತೀ ಹೈನ್.”
ಅವಳು ಹೇಳಿದಳು, “ವೈಲೆನ್ಸ್ ಪಹಚಾನ್ ರಹಿ ಹೈನ್ ಔರತೇನ್. ಹರ್ ಔರತ್ ಮೇನ್ ಸಮಜ್ಹದಾರಿ ಹೈ ಕಿ ಉಸ್ಕೆ ಸಾಥ್ ಕ್ಯಾ ಹೋ ರಹಾ ಹೈನ್. ಉನ್ಹೇ ಖುಲ್ ಕೆ ಬಾತ್ ಕರ್ನೆ ಕಿ ಹಿಮ್ಮತ್ ನಹೀ ಮಿಲ್ತಿ. ಯಹಾಂ ಆತಿ ಹೈನ್ ತೋ ಖುಲ್ ಕೆ ಬಾತ್ ಕರ್ತೀ ಹೈನ್ ಔರ್ ಏಕ್ ದೂಸ್ರೆ ಕೋ ಹಿಮ್ಮತ್ ದೇತೀ ಹೈನ್. (ಮಹಿಳೆಯರು ಈಗ ಹಿಂಸೆಯನ್ನು ಗುರುತಿಸುತ್ತಿದ್ದಾರೆ. ಅವರಿಗೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿದ್ದರೂ, ಅದರ ಬಗ್ಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲ. ಅವರು ಇಲ್ಲಿ ಬಂದಾಗ, ಅವರು ಮುಕ್ತವಾಗಿ ಮಾತನಾಡುತ್ತಾರೆ ಮತ್ತು ಪರಸ್ಪರ ಪ್ರೋತ್ಸಾಹಿಸುತ್ತಾರೆ).”
ಮೀನಾಕ್ಷಿಯವರ ಕಚೇರಿಯಲ್ಲಿ ನಡೆಯುವ ಸಭೆಗಳು ಇದಕ್ಕೆ ಉತ್ತಮ ಉದಾಹರಣೆ. ನಾನು ಇದನ್ನು ಮೂರು ಬಾರಿ ನನ್ನ ಕಣ್ಣಾರೆ ನೋಡಿದ್ದೇನೆ. ಸಾಮಾನ್ಯವಾಗಿ, ಸಭೆ ಕೇವಲ ಮೂರು ಅಥವಾ ನಾಲ್ಕು ಮಹಿಳೆಯರೊಂದಿಗೆ ಪ್ರಾರಂಭವಾಗುತ್ತದೆ; 30 ನಿಮಿಷಗಳಲ್ಲಿ, ಕೊಠಡಿ 35-40 ಹುಡುಗಿಯರು ಮತ್ತು ಮಹಿಳೆಯರಿಂದ ತುಂಬುತ್ತದೆ. ಅವರು ತಮ್ಮ ವೈಯಕ್ತಿಕ ತವಕಗಳು ಅಥವಾ ಅವರು ಬೆಂಬಲಿಸುತ್ತಿರುವ ಇತರ ಮಹಿಳೆಯರ ತವಕಗಳನ್ನು ಚರ್ಚಿಸುತ್ತಾರೆ. ಅಲ್ಲದೆ, ಪ್ರಾಪಂಚಿಕ ವಿಚಾರಗಳ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತದೆ. ಜುಹಾಪುರಾದಲ್ಲಿ ಏರುತ್ತಿರುವ ರಿಯಲ್ ಎಸ್ಟೇಟ್ ಬೆಲೆಗಳು, ಯುವಕರಲ್ಲಿ ಮಾದಕ ವ್ಯಸನ, ಚುನಾವಣೆಗಳು ಮತ್ತು ಹೆಚ್ಚು ಹೆಚ್ಚು ಹುಡುಗಿಯರು ಪ್ರೌಢ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಕರಿಸಲು ‘ಎನ್ಐಒಎಸ್ ಕೇಂದ್ರಗಳನ್ನು’ ನಡೆಸುವ ಮಹತ್ವದ ಬಗ್ಗೆ ಅವರು ಚರ್ಚಿಸುವುದನ್ನು ನಾನು ಕೇಳಿದ್ದೇನೆ.
ಮೀನಾಕ್ಷಿಯವರ ಸಂಸ್ಥೆಯೊಂದಿಗೆ ಮಾತನಾಡುವುದು, ಒಬ್ಬ ನಾಯಕಿಯಿಲ್ಲದ ಸಮುದಾಯದಲ್ಲಿ ಇರುವ ಸಂಸ್ಥೆಯೊಂದಿಗೆ ಮಾತನಾಡಿದಂತೆ ಕಂಡರೆ, ರೋಮಿಲಾ* ಅವರೊಂದಿಗಿನ ಸಂವಾದವು ವಿಭಿನ್ನವಾಗಿತ್ತು. ಅವರು ಕಷ್ಟಕರವಾದ ಪರಿಸ್ಥಿತಿಯಲ್ಲಿ 25 ವರ್ಷಗಳ ಧೈರ್ಯವಾಗಿ ಕೆಲಸ ಮಾಡಿದ ಧೀಮಂತ ಮಹಿಳೆ. ಅವರ ಮಾತಿನಲ್ಲಿ ಸ್ಪಷ್ಟತೆ ಮಾತ್ರವಲ್ಲ, ಧೈರ್ಯ, ನಿಶ್ಚಿತತೆ ಮತ್ತು ಆತ್ಮವಿಶ್ವಾಸಗಳನ್ನೂ ಕಾಣಬಹುದಿತ್ತು. ಅವರು ಹಿಂಸೆಯಲ್ಲಿ ಬದುಕುಳಿದವರ ಅನೇಕ ಕಥೆಗಳನ್ನು ಹೇಳಿ, ನಮ್ಮ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯ, ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣದ ಮತ್ತು ಸಮುದಾಯಲ್ಲೇ ಇದ್ದು ಮಾಡುವ ಕೆಲಸದ ಮೌಲ್ಯವನ್ನು ವಿವರಿಸಿದರು. ಅವರು ವಿಷದಪಡಿಸದ ಆದರೆ ಅವರ ಮಾತಿನಲ್ಲಿ ಅಂತರ್ಗತವಾಗಿದ್ದ ವಿಚಾರಗಳೆಂದರೆ, ಲಿಂಗ ಆಧಾರಿತ ಹಿಂಸೆಗೆ ಪ್ರತಿರೋಧವನ್ನು ನಿರ್ಮಿಸುವಲ್ಲಿ ಜ್ಞಾನದ ಮಹತ್ವ ಮತ್ತು ನಿಮ್ಮ ಪುಸ್ತಕಗಳನ್ನು (ಖಾತೆಗಳ) ಮತ್ತು ಆತ್ಮಸಾಕ್ಷಿಯನ್ನು ಶುದ್ಧವಾಗಿಡುವುದರ ಮಹತ್ವ.

ಸಮುದಾಯದಲ್ಲೇ ಇರುವ ನಾಯಕರಿಗಾಗಿ ಕಾರ್ಯಾಗಾರ
ಸಮುದಾಯದಲ್ಲೇ ಇರುವ ನಾಯಕರಿಗಾಗಿ ಕಾರ್ಯಾಗಾರ
ಈ ಪರಿಶುದ್ಧ ಆತ್ಮಸಾಕ್ಷಿಯೇ, ಲಖ್ನೋದಲ್ಲಿನ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ಯುವ ಗೈನಕಾಲಜಿಸ್ಟ್ ಒಬ್ಬರು ತಮ್ಮ ವೃತ್ತಿಯನ್ನು ತ್ಯಜಿಸಿ, ಲಿಂಗ ನಿರ್ಧಾರದ ದುರುಪಯೋಗವನ್ನು ತಡೆಯಲು ಪ್ರೇರೇಪಿಸಿತು. 28 ವರ್ಷಗಳ ಕಾಲ, ಉತ್ತರ ಪ್ರದೇಶದಲ್ಲಿ ಲಿಂಗ ನಿರ್ಧಾರ ಮಾಡುವ ಅನೇಕ ದಂಧೆಗಳನ್ನು ಬಯಲಿಗೆಳೆದಿರುವ ಡಾ. ನಿಶಾ ಸಿಂಗ್*, ಈ ದಂಧೆಯ ಆರ್ಥಿಕತೆಯನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ದಶಕಗಳ ನಂತರವೂ, ತಮ್ಮ ವೃತ್ತಿಯನ್ನು ತ್ಯಜಿಸುವುದಕ್ಕೆ ಕಾರಣವನ್ನು ಅವರು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ.
ಲಖ್ನೋದಲ್ಲಿನ ಅಭಿವೃದ್ಧಿ ಹೊಂದಿದ ಭಾಗದಲ್ಲಿ ಯುವ ಗೈನಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಗ, ಆಕೆ ಭೇಟಿ ಮಾಡುತ್ತಿದ್ದ ಅನೇಕ ಯುವ ದಂಪತಿಗಳಿಗೆ ಇರುತ್ತಿದ್ದ ಒಂದೇ ಪ್ರಶ್ನೆ ಏನೆಂದರೆ ʼಇದು ಹುಡುಗಿಯೇ?ʼ ಎಂಬುದು. ಶಿಕ್ಷಕರು, ನಾಗರಿಕ ಸೇವಕರು, ಪ್ರಮುಖ ವ್ಯಾಪಾರೀ ಕುಟುಂಬಗಳ ಸದಸ್ಯರು ಮುಂತಾದವರಿಗೂ ಇದೇ ಪ್ರಶ್ನೆ ಇರುವುದನ್ನು ಕಂಡು ಅವರು ಬೆಚ್ಚಿದರು. ಅವರು ವೈದ್ಯರು ಮತ್ತು ಆಡಳಿತಗಾರರೊಂದಿಗೆ ಕೆಲಸ ಮಾಡಲು ಪ್ರಯತ್ನಿಸಿದರು. ಇದರಿಂದ ಅವರಿಗೆ ತಿಳಿದದ್ದೇನೆಂದರೆ, ಲೋಭ ಮತ್ತು ಸಂವೇದನಾಶೀಲತೆಯ ಕೊರತೆಯ ಮುಂದೆ, ತರ್ಕ ಮತ್ತು ನೈತಿಕತೆ ಗೆಲ್ಲುವುದು ಕಷ್ಟ ಎಂಬುದು. 1994 ರ ಗರ್ಭಧಾರಣಾ-ಪೂರ್ವ ಮತ್ತು ಜನನ-ಪೂರ್ವ ಡಯಾಗ್ನೋಸ್ಟಿಕ್ ತಂತ್ರಗಳು ಕಾಯ್ದೆಯಡಿ (Pre-Conception and Pre-Natal Diagnostic Techniques Act 1994) ವೈದ್ಯರನ್ನು ದಾಳಿ ಮಾಡಿದಾಗ, ಡಾ. ಸಿಂಗ್ ನ್ಯಾಯಾಂಗದೊಂದಿಗೂ ಕೆಲಸ ಮಾಡಿದರು. ದುರಾದೃಷ್ಟವೆಂದರೆ̧, ಬಹುತೇಕ ಪ್ರಕರಣಗಳು ಖುಲಾಸೆಗೊಂಡವು. ಆಗಲೇ ಅವರು ಸಮುದಾಯದಲ್ಲಿ, ಹುಡುಗಿಯರೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದು.
ನಾವು ಲಖ್ನೋವಿನ ಮಾಲ್ ಬ್ಲಾಕ್ನ ಹಚ್ಚ ಹಸಿರಿನ ಮಾವಿನ ತೋಪುಗಳ ಮೂಲಕ ಪ್ರಯಾಣಿಸುತ್ತಿದ್ದೆವು. ಪಕ್ಕದ ಮಾಲಿಹಾ ಬಾದ್ನಷ್ಟು ಪ್ರಸಿದ್ಧವಾಗಿಲ್ಲದಿದ್ದರೂ, ಮಾಲ್, ಬೌರ್ (ಹೂವುಗಳು)ಗಳಿಂದ ಆವೃತವಾದ ಮಾವಿನ ಮರಗಳಿಂದ ತುಂಬಿ ತುಳುಕುತ್ತಿತ್ತು. ತಮ್ಮ ಅನುಭವಗಳ ಬಗ್ಗೆ ಮಾತನಾಡುತ್ತಿರುವಾಗ, ವೈದ್ಯರು ಮರಗಳನ್ನು ಉತ್ಸಾಹದಿಂದ ತೋರಿಸಿ, “ಬೌರಾ ಗಯೆ ಹೋ ಕ್ಯಾ (ನೀವು ಹುಚ್ಚಾಗಿದ್ದೀರಾ)” ಎಂಬ ವಾಕ್ಯವು ಇಲ್ಲಿ ಹುಟ್ಟಿರಬಹುದೇನೋ ಎಂದು ಮಾರ್ಮಿಕವಾಗಿ ನುಡಿದರು.

ಲಖ್ನೋನಲ್ಲಿರುವ ಮಾವಿನ ತೋಪು
ಇದಕ್ಕೂ ವೈದ್ಯರು ಆಯ್ಕೆ ಮಾಡಿಕೊಂಡಿರುವ ಮಾರ್ಗಕ್ಕೂ ಸಂಬಂಧವಿಲ್ಲದಿರಬಹುದು, ಆದರೆ ಅವರು ತಮ್ಮನ್ನು ಅರ್ಪಿಸಿಕೊಂಡಿರುವ ಕೆಲಸವು ನವೀನ ಆಲೋಚನೆಗಳನ್ನು ಬೇಡುತ್ತದೆ ಎಂಬುದು ಸತ್ಯ. ಈ ಆಲೋಚನೆ ಮತ್ತು ಉತ್ಸಾಹಗಳೇ ನಸ್ರೀನ್, ರೋಮಿಲಾ, ರುಬಿನಾ, ಇಶಾನಿ, ಮೀನಾಕ್ಷಿ ಮುಂತಾದ ಭಾರತದ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಾವಿರಾರು ಇತರ ಮಹಿಳೆಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಗಿದೆ.
*ಹೆಸರುಗಳನ್ನು ಬದಲಾಯಿಸಲಾಗಿದೆ