ಅಜೀಂ ಪ್ರೇಮ್ಜಿ ಶಾಲೆಗಳು, ಭಾರತದಲ್ಲಿ ಕೆ-12 ಶಿಕ್ಷಣದಲ್ಲಿ ಸುಧಾರಣೆ ತರುವುದಕ್ಕಾಗಿ ನಡೆಯುತ್ತಿರುವ ನಮ್ಮ ಕೆಲಸದ ಅವಿಭಾಜ್ಯ ಅಂಗವೆನಿಸಿವೆ
ಸುರಕ್ಷಿತ, ಅರ್ಥಪೂರ್ಣ ಮತ್ತು ಸಮನ್ವಯ – ಶಾಲೆಗಳು ಈ ಗುಣಗಳನ್ನು ಒದಗಿಸುವ ತಾಣಗಳಾಗಿ ಬದಲಾಗಬೇಕೆಂದು ನಮ್ಮ ಇಚ್ಛೆಯಾಗಿದ್ದು, ಮಕ್ಕಳು ಹಾಗೂ ಬೋಧಕರಿಬ್ಬರಿಗೂ ಇವುಗಳು ದೊರೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ. ಅಜೀಂ ಪ್ರೇಮ್ಜಿ ಶಾಲೆಗಳು, ಭಾರತದಲ್ಲಿ ಕೆ-12 ಶಿಕ್ಷಣದಲ್ಲಿ ಸುಧಾರಣೆ ತರುವುದಕ್ಕಾಗಿ ನಡೆಯುತ್ತಿರುವ ನಮ್ಮ ಕೆಲಸದ ಅವಿಭಾಜ್ಯ ಅಂಗವೆನಿಸಿವೆ.
ಮುಕ್ತ ಸಂವಹನ, ಮುಕ್ತ ಅಭಿವ್ಯಕ್ತಿ, ಸಂಪನ್ಮೂಲಗಳ ಹಂಚಿಕೊಳ್ಳುವಿಕೆಗೆ ಸಮ್ಮತಿ, ನಮ್ಮ ಪರಿಸರ ಮತ್ತು ಸಹಜೀವಿಗಳಿಳೊಂದಿಗೆ ಸಂವೇದನಾತ್ಮಕವಾಗಿರುವುದು ಇತ್ಯಾದಿಗಳಿಗೆ ಅವಕಾಶವಿದ್ದಾಗ ಗುಣಮಟ್ಟದ ಕಲಿಕೆ ಉಂಟಾಗುತ್ತದೆ ಎಂಬುದಾಗಿ ನಾವು ನಂಬಿದ್ದೇವೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಭಯ, ಪ್ರತಿಬಂಧ ಮತ್ತು ಸಾಮಾಜಿಕ ಅಡೆತಡೆಗಳಿಂದ ಮುಕ್ತವಾದ ಪರಿಸರವನ್ನು ಒದಗಿಸಲು ನಾವು ಯತ್ನಿಸುತ್ತೇವೆ.
ಮೊದಲ ಅಜೀಂ ಪ್ರೇಮ್ಜಿ ಶಾಲೆಯನ್ನು ನಾವು 2012ರಲ್ಲಿ ಸ್ಥಾಪಿಸಿದೆವು. ಈಗ ನಾವು ಒಂಬತ್ತು ಅಜೀಂ ಪ್ರೇಮ್ಜಿ ಶಾಲೆಗಳನ್ನು (ಕರ್ನಾಟಕ, ಛತ್ತೀಸ್ಗಢ, ರಾಜಸ್ಥಾನ ಮತ್ತು ಉತ್ತರಾಂಖಡದಲ್ಲಿ) ಹೊಂದಿದ್ದೇವೆ. ಈ ಮಾದರಿ ಶಾಲೆಗಳು, ನಾವು ಏನನ್ನು ಪ್ರತಿಪಾದಿಸುತ್ತೇವೆಯೋ ಅದನ್ನು ಕಾರ್ಯರೂಪಕ್ಕೆ ತರಲು ಮತ್ತು ಸರ್ಕಾರಿ ಶಾಲಾ ಶಿಕ್ಷಕರಿರೊಂದಿಗೆ ನಾವು ನಡೆಸುವ ಕೆಲಸಗಳಿಗೆ ನೆರವನ್ನು ನೀಡಲು ಅವಕಾಶವನ್ನು ಒದಗಿಸುತ್ತಿವೆ. ಮಕ್ಕಳು ಆರಂಭಿಕ ಪ್ರಾಥಮಿಕ ತರಗತಿಗಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಗಳಿಸುವುದನ್ನು ಖಾತರಿಪಡಿಸಲು ನಾವು ವಿಶೇಷ ಒತ್ತನ್ನು ನೀಡುತ್ತೇವೆ.

ನಮ್ಮ ಶಾಲೆಗಳು ರಾಜ್ಯ ಶಿಕ್ಷಣ ಮಂಡಳಿಗಳೊಂದಿಗೆ ಸಂಯೋಜಿಸಲ್ಪಟ್ಟಿದ್ದು, ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತವೆ. ತಮ್ಮ ಸಂಪನ್ಮೂಲಗಳನ್ನು ಸಂಘಟಿಸಲು ಶಿಕ್ಷಕರಿಗೆ ಉತ್ತೇಜನ ನೀಡಲಾಗುತ್ತದೆ. ನಾವು ಇತ್ತೀಚೆಗೆ ಹಂತ ಹಂತವಾಗಿ ನಮ್ಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದತ್ತ ಸಾಗುತ್ತಿದ್ದೇವೆ.
ನಮ್ಮ ಜಿಲ್ಲಾ ಸಂಸ್ಥೆಗಳಲ್ಲಿ ನಿರಂತರ ಹಂಚಿಕೆಯ ವ್ಯವಸ್ಥೆಯ ಮೂಲಕ ಶಿಕ್ಷಕರ ವೃತ್ತಿಪರ ಬೆಳವಣಿಗೆ ಕಾರ್ಯಕ್ರಮವನ್ನು ನಾವು ನಡೆಸುತ್ತಿದ್ದು, ಶಾಲಾ ಪ್ರಕ್ರಿಯೆಗಳನ್ನು ನಮ್ಮ ಸಮಗ್ರ ನೋಟದೊಂದಿಗೆ ಹೊಂದಿಸಲು ಸಹಾಯ ಮಾಡುವ ಶಾಲಾ ಸಕ್ರಿಯಗೊಳಿಸುವಿಕೆ ಗುಂಪನ್ನು (School Enabling Group) ಸಹ ಹೊಂದಿದ್ದೇವೆ.
ಅಜೀಂ-ಪ್ರೇಮ್ಜಿ-ಶಾಲೆಗಳು
ಶಿಕ್ಷಣವು ಎಲ್ಲರಿಗೂ ಉಚಿತವಾಗಿ ದೊರೆಯಬೇಕೆನ್ನುವ ನಮ್ಮ ನಂಬಿಕೆಗೆ ಅನುಗುಣವಾಗಿ ನಮ್ಮ ಶಾಲೆಗಳು ಉಚಿತವಾಗಿ ಶಿಕ್ಷಣವನ್ನು ನೀಡುತ್ತಿವೆ. ನಾವು ವಿವಿಧ ಸಮಾಜೋ-ಆರ್ಥಿಕ ಮತ್ತು ಧಾರ್ಮಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿದ್ದು, ಸ್ಥಳೀಯ ಸಮುದಾಯಗಳ ಜನರು ತಮ್ಮ ಮಕ್ಕಳನ್ನು ದಾಖಲು ಮಾಡಲು ಉತ್ತೇಜಿಸುತ್ತಿದ್ದೇವೆ. ಸದ್ಯಕ್ಕೆ ಕೆಲವು ಶಾಲೆಗಳಲ್ಲಿ ಪ್ರೌಢಶಾಲಾ ಹಂತದ ತನಕ ತರಗತಿಗಳು ನಡೆಯುತ್ತಿದ್ದು, ಇವು ಕಾಲಕ್ರಮೇಣ ಕೆ-12 ವಿದ್ಯಾರ್ಥಿಗಳಿಗೆ ಸೇವೆಯನ್ನು ಒದಗಿಸಲಿವೆ.
ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯು ನಮ್ಮ ಕೆಲಸದ ಪ್ರಮುಖ ಅಂಶವಾಗಿದೆ. ನಮ್ಮ ಶಾಲೆಗಳಲ್ಲಿ ಬೆಳಗಿನ ಪೂರಕ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತಿದ್ದು, ಮಕ್ಕಳ ನಿರಂತರ ಆರೋಗ್ಯ ತಪಾಸಣೆಯನ್ನು ನಡೆಸುತ್ತೇವೆ. ತಮ್ಮ ಮಕ್ಕಳಿಗೆ ಬೇಕಾಗುವ ಆಹಾರ ಮತ್ತು ಪೌಷ್ಟಿಕತೆಯ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನಾವು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ.
ತಮ್ಮ ಮಕ್ಕಳ ಒಟ್ಟಾರೆ ಶೈಕ್ಷಣಿಕ ಪಯಣದಲ್ಲಿ ಪೋಷಕರು ಸಹ ಸಮಾನ ಪಾಲುದಾರರೆಂದು ನಾವು ಪರಿಗಣಿಸುತ್ತಿದ್ದು, ತರಗತಿಯೊಳಗೆ ಮತ್ತು ಹೊರಗೆ ವಿದ್ಯಾರ್ಥಿಗಳು ಏನನ್ನು ಕಲಿಯುತ್ತಿದ್ದಾರೋ, ಅದರಲ್ಲಿ ಸಕ್ರಿಯ ಆಸಕ್ತಿಯನ್ನು ವಹಿಸಲು ನಾವು ಅವರನ್ನು ಉತ್ತೇಜಿಸುತ್ತೇವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಶಾಲೆ ಮತ್ತು ಸಮುದಾಯದ ನಡುವೆ ಉತ್ತಮ ಸಂಬಂಧವನ್ನು ರೂಪಿಸುವುದಕ್ಕಾಗಿ ನಾವು ಒತ್ತು ನೀಡುತ್ತೇವೆ. ಪೋಷಕರೊಂದಿಗೆ ನಿರಂತರ ಚರ್ಚೆ ನಡೆಸುವುದು, ಮನೆ ಭೇಟಿ ಮತ್ತು ಸಮುದಾಯ ಸಭೆಗಳ ಮೂಲಕ ಶಾಲೆ ಮತ್ತು ಸಮುದಾಯದ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ನಾವು ಕೆಲಸ ಮಾಡುತ್ತೇವೆ.