ನೀರಿನ ಕ್ಷೇತ್ರದಲ್ಲಿ ನಾವು, ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವ ಲೋಪಗಳನ್ನು ಗಮನಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. (ಇದು ಬಣ್ಣದಲ್ಲಿರಬಹುದು)
ಭಾರತದಲ್ಲಿ ಸ್ವಚ್ಛ ಕುಡಿಯುವ ನೀರಿನ ಹಕ್ಕನ್ನು ಆಹಾರದ ಹಕ್ಕು, ಸ್ವಚ್ಛ ಪರಿಸರದ ಹಕ್ಕು ಮತ್ತು ಆರೋಗ್ಯದ ಹಕ್ಕಿನ ಜೊತೆಗೆ ಸಂಯೋಜಿಸಲಾಗಿದೆ – ಇವೆಲ್ಲವೂ ಭಾರತದ ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಜೀವಿಸುವ ಹಕ್ಕಾಗಿ ಸಂರಕ್ಷಿಸಲ್ಪಟ್ಟಿವೆ.
ಆದರೆ, ಮಾನವ ಮತ್ತು ಇತರ ಎಲ್ಲ ಜೀವ ಪ್ರಬೇಧಗಳ ಗುಣಮಟ್ಟವನ್ನು ನಿರ್ಧರಿಸುವ ಒಂದು ಮೂಲಭೂತ ಸಂಪನ್ಮೂಲವಾದ ನೀರಿನ ಲಭ್ಯತೆಯು ಆಯಾ ಪ್ರದೇಶದ ಭೌಗೋಳಿಕತೆ, ಸಮಾಜೋ-ಆರ್ಥಿಕ ಸ್ಥಿತಿಗಳು ಹಾಗೂ ಹವಾಮಾನ ಬದಲಾವಣೆಯಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.

ಚಿತ್ರ ಕ್ರೆಡಿಟ್ - ಪುರುಸೊತ್ತಮ್ ಠಾಕೂರ್
ಈ ದೇಶದ ಪ್ರತೀ ಮನುಷ್ಯನಿಗೂ ನೀರಿನ ಲಭ್ಯತೆಯು ಇರುವಂತಹ ಭವಿಷ್ಯವನ್ನು ನಿರ್ಮಿಸುವ ಕಾಯಕಕ್ಕೆ ಹೆಗಲು ನೀಡುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ದಿಶೆಯಲ್ಲಿ ನಾವು ಭಾರತದಲ್ಲಿ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಅತೀ ಹೆಚ್ಚು ಸಂತ್ರಸ್ತರಾದ ಜನರೊಂದಿಗೆ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚಿನ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದೇವೆ.
ಇದಕ್ಕೆಂದೇ ಆಯ್ದ ಭೌಗೋಳಿಕ ಪ್ರದೇಶಗಳು ಮತ್ತು ಕೃಷಿ-ಪರಿಸರ ವಲಯಗಳಲ್ಲಿ ನಮ್ಮ ಪಾಲುದಾರ ಸಂಸ್ಥೆಗಳು ಸಕ್ರಿಯವಾಗಿವೆ. ಅವು ಶುಷ್ಕ ಮತ್ತು ಅರೆ-ಶುಷ್ಕ ಭೂಮಿ, ಪರ್ವತ ಹಾಗೂ ನೀರಿನ ಗುಣಮಟ್ಟ ಕಳಪೆಯಾಗಿರುವ ಪ್ರದೇಶಗಳನ್ನು ಒಳಗೊಂಡಿವೆ.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸೌಲಭ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳೊಂದಿಗೆ ಜೊತೆಗೂಡಿ ಕೆಲಸ ಮಾಡುವುದು ನಮ್ಮ ಬಹು-ಆಯಾಮಗಳನ್ನೊಳಗೊಂಡ ಮಾರ್ಗದ ಮೊದಲ ಹೆಜ್ಜೆಯಾಗಿದೆ. ಇದರ ಅಂಗವಾಗಿ ನೀರಿನ ಮೂಲಗಳ ಸಮರ್ಪಕ ಪ್ರಮಾಣದ ಲಭ್ಯತೆ ಮತ್ತು ಸುಸ್ಥಿರತೆ ಹಾಗೂ ನೀರಿಗೆ ಸಂಬಂಧಪಟ್ಟ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತಾಗಲು ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗುವಂತೆ ವಿತರಣಾ ವ್ಯವಸ್ಥೆಗಳು ಮತ್ತು ಗ್ರಾಮದ ಸಂಸ್ಥೆಗಳನ್ನು ಬಲಪಡಿಸುವುದು ನಮ್ಮ ಮುಖ್ಯ ಗುರಿಯಾಗಿದೆ.
ಇಂತಹ ಉಪಕ್ರಮಗಳ ಅಡಿಯಲ್ಲಿ, ಇದುವರೆಗೂ ಬಳಕೆಗೆ ಸಿಗದ ನೀರಿನ ಮೂಲಗಳನ್ನು, ವರ್ಷವಿಡೀ ಆ ಪ್ರದೇಶದ ಜನರಿಗೆ ಸಮರ್ಪಕವಾಗಿ ಮತ್ತು ಸುಲಭವಾಗಿ ಬಳಕೆಗೆ ಸಿಗುವಂತೆ ಪುನರುಜ್ಜೀವಗೊಳಿಸಲಾಗಿದೆ. ಈಗ ಅಲ್ಲಿನ ಜನತೆಗೆ ಸ್ವಚ್ಛ ಕುಡಿಯುವ ನೀರು ಸಿಗುತ್ತಿರುವುದರ ಜೊತೆಗೆ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತೂ ಅವರಲ್ಲಿ ಜಾಗೃತಿ ಮೂಡಿಸಲಾಗಿದೆ.
ನೀರಿನ ವಿತರಣೆ ನಿಯಮಿತವಾಗಿ ಆಗುವಂತೆ ನೋಡಿಕೊಳ್ಳಲು ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ನಮ್ಮ ಪಾಲುದಾರ-ಸಂಸ್ಥೆಗಳು ಸಮುದಾಯ-ಹಂತದ ಸಂಸ್ಥೆಗಳಿಗೆ ಸಹಾಯ ಮಾಡುತ್ತವೆ.
ಬಾಹ್ಯ ಜಲ (ಭೂಮಿಯ ಮೇಲಿನ ನೀರು) ಮತ್ತು ಅಂತರ್ಜಲ ಸಂಪನ್ಮೂಲಗಳನ್ನು ಹೆಚ್ಚಿಸುವ ಮೂಲಕ, ಮಣ್ಣಿನ ತೇವಾಂಶದ ಸುಸ್ಥಿರತೆಯ ಮೂಲಕ ಮತ್ತು ನೀರಾವರಿ ವ್ಯವಸ್ಥೆಯಿಂದ ಸಿಗುವ ನೀರನ್ನು ಸಮುದಾಯವು ದಕ್ಷವಾಗಿ ನಿರ್ವಹಿಸಲು ಅವರಿಗೆ ಸಹಾಯ ಮಾಡುವ ಮೂಲಕ ಕೃಷಿ ಬಳಕೆಗಾಗಿ ನೀರು ಲಭ್ಯವಾಗುವಂತೆಯೂ ನಾವು ಗಮನ ವಹಿಸುತ್ತೇವೆ.
ಅದರ ಪರಿಣಾಮವಾಗಿ ಹಿಂಗಾರು ಕೃಷಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳು ಹೆಚ್ಚಾಗಿವೆ, ಸಾಗುವಳಿ ಮಾಡದೆ ಬಿಟ್ಟ ಕೃಷಿಯೋಗ್ಯ ಜಾಗಗಳು ಕೃಷಿಗೆ ಬಳಕೆಯಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ, ನೀರಾವರಿ ಭೂಮಿಯ ಹರವು ಹೆಚ್ಚಾಗಿದೆ ಹಾಗೂ ಉತ್ತಮ ನೀರು ಮತ್ತು ಬೆಳೆ ನಿರ್ವಹಣೆಯ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿರುವ ರೈತರ ಸಂಖ್ಯೆಯೂ ಏರುತ್ತಿದೆ.
ನಗರದ ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದನ್ನು ಖಾತ್ರಿ ಪಡಿಸುವುದು ನೀರಿನ ಕ್ಷೇತ್ರದಲ್ಲಿನ ನಮ್ಮ ಮತ್ತೊಂದು ಕಾರ್ಯವಾಗಿದೆ.
ನೀರಿನ ಕ್ಷೇತ್ರದಲ್ಲಿ, ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.