ಆಡಳಿತಕ್ಕೆ ಸಂಬಂಧಿಸಿದ ನಮ್ಮ ಕೆಲಸವನ್ನು ಎರಡು ವಿಶಾಲ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ: ಸ್ಥಳೀಯ ಪ್ರಜಾಪ್ರಭುತ್ವ ಹಾಗೂ ಕಲ್ಯಾಣ ಹಕ್ಕುಗಳು ಮತ್ತು ನ್ಯಾಯದ ಲಭ್ಯತೆ

ಸ್ಥಳೀಯ ಪ್ರಜಾಪ್ರಭುತ್ವ ಮತ್ತು ಕಲ್ಯಾಣ ಹಕ್ಕುಗಳ ಅಡಿಯಲ್ಲಿ, ನಾವು ಹಕ್ಕು ಮತ್ತು ಅಧಿಕಾರಗಳನ್ನು ಸಮರ್ಪಕವಾಗಿ ಪಡೆದುಕೊಳ್ಳುವುದನ್ನು ಅನುಕೂಲಿಸುವುದು, ಕುಂದುಕೊರತೆಗಳ ಪರಿಹಾರಕ್ಕಾಗಿ ಮಾರ್ಗಗಳನ್ನು ಒದಗಿಸುವುದು, ಮತ್ತು ಪಂಚಾಯತ್‌ಗಳು ಸಂವಿಧಾನದ ನಿಜವಾದ ಉದ್ದೇಶ ಮತ್ತು ಆಶಯವನ್ನು ಅರ್ಥಮಾಡಿಕೊಂಡು ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಡುವುದರತ್ತ ಗಮನಹರಿಸುತ್ತೇವೆ.

ಈ ಕಾರ್ಯದಡಿ ನಮ್ಮೊಂದಿಗೆ 70 ಕ್ಕೂ ಹೆಚ್ಚು ಸಂಸ್ಥೆಗಳು ಪಾಲುದಾರರಾಗಿರುವ ಗ್ರಾಮ ಸಭೆಗಳು, ಸಮುದಾಯ-ಆಧರಿತ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿ ಸಂರಚನೆ ಮತ್ತು ಸ್ಥಳೀಯ ಯುವಕರೊಂದಿಗೆ ಕೆಲಸ ಮಾಡುತ್ತವೆ.

ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು ರೈತರ ಗುಂಪುಗಳಂತಹ ವಿವಿಧ ಸಮುದಾಯ ಸಮುಚ್ಚಯಗಳ ಬಲಪಡಿಸುವಿಕೆಯನ್ನು ನಾವು ಸಕ್ರಿಯವಾಗಿ ಬೆಂಬಲಿಸುತ್ತೇವೆ.

ಚಿತ್ರ ಕೃಪೆ:- ಪುರುಸೊತ್ತಮ್ ಠಾಕೂರ್

ಸಮುದಾಯದ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ಸ್ಥಳೀಯ ಪ್ರಜಾಪ್ರಭುತ್ವದ ಬಗೆಗಿನ ದೃಷ್ಟಿಕೋನಗಳನ್ನು ಬೆಳೆಸಲು ನಾವು ಪಾಲುದಾರರೊಂದಿಗೆ ಜೊತೆಗೂಡುತ್ತೇವೆ; ಯುವಕರು ಮತ್ತು ಜನಸಮೂಹದ ಇತರ ಗುಂಪುಗಳೊಂದಿಗೆ ಸಹ ತೊಡಗಿಸಿಕೊಳ್ಳತ್ತೇವೆ. ನಾವು ಸಾಮಾಜಿಕ ನ್ಯಾಯ, ಸಮಾನತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯಂತಹ ವಿಷಯಗಳ ಬಗ್ಗೆಯೂ ಗಮನ ಹರಿಸುತ್ತೇವೆ. ಇದು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಸುಧಾರಿಸಲು ಸಹಾಯ ಮಾಡಿದೆ – ಉದಾಹರಣೆಗೆ, ಪಂಚಾಯತ್ ಮಟ್ಟದಲ್ಲಿ ಕ್ರಮಬದ್ಧಗೊಳಿಸಲಾದ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಾಯಿ ಸಮಿತಿಗಳು.

ಅರಿವಿನ ಕೊರತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಕೊರತೆಯಂತಹ ಬೇಡಿಕೆಯ ನೆಲೆಯ ಲೋಪಗಳು ಮತ್ತು ಸರ್ಕಾರಿ ಕಾರ್ಯನಿರ್ವಾಹಕರ ತರಬೇತಿಯ ಕೊರತೆ ಮತ್ತು ಕೊನೆಯ ಹಂತದ ವಿತರಣೆಯಲ್ಲಿನ ವೈಫಲ್ಯದಂತಹ ಪೂರೈಕೆಯ ನೆಲೆಯ ಲೋಪಗಳನ್ನು ಪರಿಹರಿಸುವ ಮೂಲಕ ನಾಗರಿಕರು ಅಧಿಕಾರ ಮತ್ತು ಸೇವೆಗಳನ್ನು ಸುಗಮವಾಗಿ ಪಡೆದುಕೊಳ್ಳುತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೂಡ ನಾವು ಸಹಾಯ ಮಾಡುತ್ತೇವೆ.

ಉತ್ತಮ ಪ್ರಾತಿನಿಧ್ಯ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಭಾಗವಹಿಸುವಿಕೆ ಮತ್ತು ಸರ್ಕಾರಿ ಕಾರ್ಯನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ ಸುಧಾರಿತ ಪೌರತ್ವ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ನಿರಂತರ ಪ್ರಯತ್ನಗಳು ಕಾರ್ಯಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಗಳನ್ನು ನೀಡಿವೆ.

ನಾವು ಪಡಿತರ, ನರೇಗಾ ಅಡಿಯಲ್ಲಿನ ಕೆಲಸಗಳು, ಅಧಿಕಾರಗಳು, ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ, ಭೂಮಿ ಮತ್ತು ಅರಣ್ಯ ಹಕ್ಕುಗಳನ್ನು ಪಡೆದುಕೊಳ್ಳುವುದನ್ನು ಉತ್ತಮಪಡಿಸುವುದಕ್ಕೂ ಸಹ ಕೆಲಸ ಮಾಡಿದ್ದೇವೆ. ಜೊತೆಗೆ, ಯೋಜನೆಗಳು, ಕಾರ್ಯವಿಧಾನಗಳು ಮತ್ತು ಕುಂದುಕೊರತೆಗಳನ್ನು ಕುರಿತು ಅರ್ಜಿ ಸಲ್ಲಿಸುವ ಕಾರ್ಯಪ್ರಕ್ರಿಯೆಗಳ ಬಗ್ಗೆ ನಾಗರಿಕರ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕಾರ್ಯದ ಎರಡನೇ ವಿಷಯಾಧಾರಿತ ಕ್ಷೇತ್ರವನ್ನು ನ್ಯಾಯದ ಲಭ್ಯತೆ ಎಂದು ಕರೆಯಲಾಗುತ್ತದೆ.

ಇದರ ಅಡಿಯಲ್ಲಿ, ದುರ್ಬಲ ಹಿನ್ನೆಲೆಯ ಗುಂಪುಗಳು ತರಬೇತಿ, ಕಾನೂನು ಸಮಾಲೋಚನೆ ಮತ್ತು ಕಾನೂನು ಸಹಾಯದ ಮೂಲಕ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಅನುಕೂಲವಾಗುವಂತೆ ಅವರಿಗೆ ಕಾನೂನಿನ ಅರಿವನ್ನು ಒದಗಿಸಿ ಅವರ ಭಾಗವಹಿಸುವಿಕೆ ಹಾಗೂ ಪ್ರಾತಿನಿಧ್ಯವನ್ನು ಹೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಿರುವ 40ಕ್ಕೂ ಹೆಚ್ಚು ಸಂಸ್ಥೆಗಳನ್ನು ಬೆಂಬಲಿಸುತ್ತೇವೆ.

ನಮ್ಮ ಪಾಲುದಾರರು ಭಾರತದ ಕೆಲವು ಅತ್ಯಂತ ಅಂಚಿನಲ್ಲಿರುವ ಮತ್ತು ದುರ್ಬಲ ಹಿನ್ನೆಲೆಯ ಜನರೊಂದಿಗೆ ಕೆಲಸ ಮಾಡುತ್ತಾ, ಕೇಂದ್ರ-ಆಧರಿತ ಕಾನೂನು-ಸಹಾಯದ ಮೂಲಕ ಹಕ್ಕು-ಆಧರಿತ, ಸಾರ್ವಜನಿಕ-ಸೇವಾ ಮನೋಭಾವವುಳ್ಳ ಹಾಗೂ ಶುಲ್ಕರಹಿತವಾಗಿ ಅಥವಾ ಕಡಿಮೆ ಶುಲ್ಕ ಪಡೆದು ದುಡಿಯುವ ವಕೀಲರನ್ನು ಒದಗಿಸುತ್ತಾರೆ.

ಅವರು ನ್ಯಾಯಾಂಗ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದಂತಹ ನಿರ್ಣಾಯಕ ಭಾಗೀದಾರರೊಂದಿಗೆ ಸಹ ತೊಡಗಿಸಿಕೊಂಡು ಸಮುದಾಯದಲ್ಲಿ ಅರೆ-ಕಾನೂನು ಸ್ವಯಂಸೇವಕರ ಜಾಲವನ್ನು ನಿರ್ಮಿಸುತ್ತಾರೆ.

ಅವರ ಕೆಲಸವು ದುರ್ಬಲ ಹಿನ್ನೆಲೆಯ ಜನರಾದ ಮಕ್ಕಳು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು – ಕಾನೂನು ಸಹಾಯವನ್ನು ಪಡೆಯಲು ಮತ್ತು ತಮ್ಮ ಪರವಾಗಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹೂಡಿ ಹೋರಾಡಲು ವಕೀಲರ ಸೇವೆಯನ್ನು ಹೊಂದಲು ಸಹಾಯ ಮಾಡಿದೆ. ಇದು ಸಂತ್ರಸ್ತರಿಗೆ ಭೂಮಿಯ ಹಕ್ಕು ಮತ್ತು ಪರಿಹಾರದಂತಹ ಸವಲತ್ತುಗಳನ್ನು ಪಡೆಯಲು ಸಹಾಯ ಮಾಡಿದೆ. ದುರ್ಬಲ ಹಿನ್ನೆಲೆಯ ಅನೇಕ ಜನರು ಜಾಮೀನು ಪಡೆಯಲು ಅಥವಾ ಖುಲಾಸೆಗೊಳ್ಳಲು ಕೂಡ ಕಾನೂನು ಪರಿಹಾರವನ್ನು ಪಡೆದಿದ್ದಾರೆ.

ಆಡಳಿತ ಕ್ಷೇತ್ರದಲ್ಲಿ ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.

© 2025 अजीम प्रेमजी फाउंडेशन. सर्वाधिकार सुरक्षित।
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.